
ಪಂಪ ಭಾರತದ ಇಂಗ್ಲಿಷ್ ಅನುವಾದವನ್ನು ಕುರಿತ ಪ್ರಕಟನೆ
ಮಾರ್ಚ್ 7, 2025

ವಸಂತ ಪಂಚಮಿಯಂದು ʼಕರ್ಣಾಟʼದ ಅಧಿಕೃತ ಉದ್ಘಾಟನೆ

೨೦೨೪ರ ಫೆಬ್ರವರಿ ೧೪ರ ವಸಂತ ಪಂಚಮಿಯ ಮಂಗಳಕರ ದಿನದಂದು, ಭಾರತೀಯ ಕ್ಯಾಲೆಂಡರ್ ಪ್ರಕಾರ ವಸಂತಕಾಲದ ಆರಂಭವನ್ನು ತಿಳಿಸುವ ಮತ್ತು ಕಲಿಕೆಯ ದೇವತೆಯಾದ ಸರಸ್ವತಿಯನ್ನು ಪೂಜಿಸುವ ದಿನ, ನಾವು ಅಧಿಕೃತವಾಗಿ ʼಕರ್ಣಾಟʼ ಶೀರ್ಷಿಕೆಯ ಅಭಿಜಾತ ಕನ್ನಡ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ‘ಕರ್ಣಾಟ’ - ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲಿ ವ್ಯಾಪಕವಾಗಿ ಬಳಸಲಾದ ಪದ - ಪ್ರದೇಶದ ಕಪ್ಪು ಮಣ್ಣನ್ನು ಅಥವಾ ಕಿವಿಗೆ ಆಹ್ಲಾದಕರವಾದ ನುಡಿಯನ್ನು ಸೂಚಿಸುತ್ತದೆ. ಕೇಂದ್ರದ ಪರಿಕಲ್ಪನೆಯು ವಿಶ್ವವಿದ್ಯಾಲಯದ ಚೌಕಟ್ಟಿನಿಂದ ಭಿನ್ನವಾದ, ಅಭಿಜಾತ ಕನ್ನಡದ ಶ್ರೀಮಂತ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಸಂಘಟಿತ ಪ್ರಯತ್ನದ ಅನಿವಾರ್ಯತೆಯಿಂದ ಹೊರಹೊಮ್ಮಿತು. ಈ ಅಗತ್ಯವು ಆರ್.ವಿ.ಎಸ್. ಸುಂದರಂ, ಗಿಲ್ ಬೆನ್-ಹೆರುತ್ ಮತ್ತು ಮನೀಶ್ ಮಹೇಶ್ವರಿ – ಈ ಮೂರು ಸಂಸ್ಥಾಪಕ ಸದಸ್ಯರ ನಡುವೆ ಚರ್ಚೆಗಳ ಸರಣಿಯನ್ನು ಹುಟ್ಟುಹಾಕಿತು. ಕನ್ನಡ ವಿದ್ವಾಂಸ ಸಮುದಾಯದೊಳಗಿನ ಸಾಮೂಹಿಕ ಶಕ್ತಿ ಮತ್ತು ಪರಿಣತಿಯನ್ನು ಗುರುತಿಸಿ, ನಾವು ಕೇಂದ್ರದ ಪ್ರಾಥಮಿಕ ಯೋಜನೆಗಳು ಮತ್ತು ದೀರ್ಘಾವಧಿಯ ಕಾರ್ಯಕ್ರಮಗಳನ್ನು ರೂಪಿಸುವ ಗುರಿಯೊಂದಿಗೆ ಅರ್ಥಪೂರ್ಣ ಸಂವಾದಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಪ್ರಯತ್ನಗಳಿಂದ ಹೆಚ್ಚಿನ ಆಸಕ್ತರು ಪರಂಪರೆಯ ಕಡೆಗೆ ಗಮನಕೊಡುವಂತೆ ಮಾಡಿ ವಿದ್ವತ್ತನ್ನು ಬೆಳೆಸಲು ಸಾಧ್ಯವಾಗುತ್ತದೆ. ಅಭಿಜಾತ ಕನ್ನಡ ಆಧುನಿಕಪೂರ್ವ ಸಂಪ್ರದಾಯಗಳನ್ನು ಸೂಚಿಸುತ್ತದೆ. ಅದು ಸಾಹಿತ್ಯಕ ಮತ್ತು ಭೌತಿಕ ಅಂಶಗಳೆರಡನ್ನೂ ಒಳಗೊಳ್ಳುತ್ತದೆ. ಅಭಿಜಾತ ಕನ್ನಡ ಸಂಪ್ರದಾಯಗಳ ಕಲಿಕೆ ಮತ್ತು ಪ್ರಸಾರವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ತಂತ್ರಗಾರಿಕೆಯಿಂದ ಬಳಸುವುದು ನಮ್ಮ ಕಾರ್ಯಕ್ರಮದ ಪ್ರಮುಖ ಬಿಂದುಗಳಲ್ಲಿ ಒಂದಾಗಿದೆ.
ಈ ಮಹತ್ವದ ಸಂದರ್ಭದ ನೆನಪಿಗಾಗಿ, ಸಂಸ್ಥಾಪಕ ತಂಡವು ಮೈಸೂರಿನ ಶಾರದಾದೇವಿಯ ದೇವಾಲಯಕ್ಕೆ ಭೇಟಿ ನೀಡಿತು. ಸರಸ್ವತಿ ದೇವತೆಯ ದೇವಾಲಯದ ಆವರಣದಲ್ಲಿ ನಾವು ಹಲವಾರು ಚಿಕ್ಕ ಮಕ್ಕಳು ಅವರ ಹೆತ್ತವರೊಂದಿಗೆ ಬಂದು ಅಕ್ಷರಾಭ್ಯಾಸ ಮಾಡುವುದನ್ನು ಗಮನಿಸಿದೆವು. ಈ ಅಭ್ಯಾಸ ಮಕ್ಕಳ ಮನಸ್ಸುಗಳಲ್ಲಿ ಸ್ಫೂರ್ತಿಯ ಕಿಡಿಯನ್ನು ಹೊತ್ತಿಸುತ್ತದೆ ಮತ್ತು ಅಭಿಜಾತ ಸಂಪ್ರದಾಯಗಳ ಜಗತ್ತಿನಲ್ಲಿ ಆಳವಾಗಿ ಅಧ್ಯಯನ ಮಾಡಲು ಅವರನ್ನು ಪ್ರೋತ್ಸಾಹಿಸುತ್ತದೆ ಎಂಬ ಆಕಾಂಕ್ಷೆಯನ್ನು ನಾವು ಹೊಂದಿದ್ದೇವೆ. ತಮ್ಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಬೇರುಗಳ ಆಳವನ್ನು ಮೌಲ್ಯೀಕರಿಸುವ ಮತ್ತು ಅರ್ಥಮಾಡಿಕೊಳ್ಳುವ ಪೀಳಿಗೆಯನ್ನು ಪೋಷಿಸುವ ಮೂಲಕ, ಅಭಿಜಾತ ಕನ್ನಡದ ಜ್ಯೋತಿಯನ್ನು ಭವಿಷ್ಯದಲ್ಲಿ ವಿದ್ವಾಂಸರು, ಕಲಾವಿದರು ಮತ್ತು ಶಿಕ್ಷಣತಜ್ಞರು ಬೆಳಗಿಸುವುದನ್ನು ನಾವು ನಿರೀಕ್ಷಿಸುತ್ತೇವೆ.