EN | KA

VI

Naḷacaritre

ಇಂದುವದನೆಯನಗಲಿ ತಾ ಮನ
ನೊದು ಕಾರ್ಕೋಟಕನ ದೆಸೆಯಲಿ
ಬಂದು ಹೊಕ್ಕನು ನಿಷಧಪತಿ ಋತುಪರ್ಣನಗರಿಯನು

ಕೇಳು ಕುಂತೀತನಯ ನಿಷಧನೃ
ಪಾಲನಿತ್ತಲು ಮರೆದು ಮಲಗಿದ
ಬಾಲಕಿಯ ಬಿಟ್ಟಡವಿಯಲಿ ಹೊರವಂಟನಾ ವನವ
ಕಾಲವಾವನ ಕೀಳು ಮಾಡದು
ಶೂಲಪಾಣಿಯೆ ಬಲ್ಲ ನಳ ಭೂ
ಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ

ವನಿತೆ ಮಲಗಿಹಳೋ ಅಧೈರ್ಯದಿ
ನೆನೆವಳೋ ದೈವವನು ನಿದ್ರೆಯ
ಕನಸ ಕಂಡೇಳುವಳೊ ಕಾಣದೆ ಹಲವ ಹಂಬಲಿಸಿ
ಕನಲಿ ವಿಧಿಯನು ಬೈವಳೋ ಕಂ
ಬನಿಯ ಸುರಿವಳೊ ಶೋಕದಲಿ ನಿಜ
ತನುವ ಬಿಡುವಳೊ ಕಾಂತೆಯೆಂತಿಹಳೆನುತ ನಡೆತಂದ

ಸುತರ ಪರರೆಡೆಗಿತ್ತು ನಂಬಿದ
ಸತಿಯ ತಂದಡವಿಯಲಿ ಮಲಗಿಸಿ
ಮತಿವಿಕಳನಾದೆನು ಪುರಾಕೃತಕರ್ಮಫಲವೈಸೆ
ಕ್ಷಿತಿಯೊಳಾರುಂಟೆನ್ನವೊಲ್ ನಿಜ
ಸತಿಗೆ ತಪ್ಪಿದ ಬಾಹಿರನುಯೆಂ
ದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ

ಲೋಕದೊಳಗಗ್ಗಳೆಯ ಮಹಿಪರ
ನೇಕರವರೊಳಗಾರನೊಲ್ಲದೆ
ನೂಕಿ ತನ್ನನೆ ಒಲಿದು ಕೈಕೊಂಡಳು ಸರೋಜಮುಖಿ
ಆಕೆಯಗಲಿದ ಪಾತಕನು ತಾ
ನೇಕೆ ಧರೆಯೊಳು ಶಿವಶಿವಾಯೆಂ
ದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ

ಈ ಪರಿಯೊಳತಿಶೋಕದಿಂದ ಪ್ರ
ಳಾಪಿಸುವ ನಳನೃಪತಿ ಹೆಚ್ಚಿದ
ತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆ
ಶ್ರೀಪತಿಯ ನೆಲೆಗೊಳಿಸಿ ಹೃದಯದ
ತಾಪದೊಳು ಬರುತಿರಲು ಮುಂದೆ ಸ
ಮೀಪದಲಿ ಹುತವಹನ ಮಹಿಮೆಯ ಕಡನವನೀಶ

ಏನನೆಂಬೆನು ನೃಪತಿ ಕಿಚ್ಚಿನ
ಹಾನಿಯನು ಬನದೊಳಗೆ ಚಲಿಸುತ
ಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿ
ಕಾನನವನೆಡೆಗೊಂಡ ದಳ್ಳುರಿ
ಗಾನಲಾಪುದೆ ತರುನಿಕರ ವೈ
ಮಾನಿಕರು ನಡನಡುಗೆ ಬೆಂದದು ಸಕಲ ವನಭೂಮಿ

ಬಿದಿರ ಮೆಳೆ ಧಗಧಗಿಸೆ ಘನ ಹೆ
ಬ್ಬಿದಿರು ಛಟಛಟಿರೆನಲು ಉರಿಯೊಳು
ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳಲಿ
ಗದಗದಿಸೆ ಗುಹೆಗಳಲಿ ಮೃಗತತಿ
ಬೆದರಿ ಹಾಯ್ದುವು ಪಕ್ಷಿಸಂಕುಲ
ಉದುರಿದುವು ಗರಿಸಹಿತ ಬೆಂದಾ ವನದ ಮಧ್ಯದಲಿ

ತೆಗೆದು ಹಾಯ್ದುವು ಸಿಂಹ ಶಾರ್ದೂ
ಲಗಳು ಕರಿಗಳ ಹಿಂಡು ನಾನಾ
ಮೃಗಗಳಗಣಿತ ಬೆಂದು ಬಿದ್ದವು ನಿಮಿಷಮಾತ್ರದಲಿ
ಚಿಗಿದು ಹಾಯ್ದುವು ಗಂಡಭೇರುಂ
ಡಗಳು ಮೊದಲಾದಖಿಳಮೃಗಪ
ಕ್ಷಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳೆಂದ

ಪ್ರಳಯಕಾಲದಿ ಸುಡುವ ವಡಬಾ
ನಳನೊಯೆನಲಾ ವನವ ಸುಡುತಲಿ
ಸುಳಿಸುಳಿಯುತಾಹಾರಗೊಳುತಿರಲಲ್ಲಿ ದನಿಯಾಯ್ತು
ಸಿಲುಕಿದೆನು ಪಾವಕನೊಳೆನ್ನನು
ಒಲಿದು ಹಾ ನೃಪಕುಲಶಿರೋಮಣಿ
ಕಳೆದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ

ಆಗಲಾ ದನಿಗೇಳಿ ನೃಪತಿ ಸ
ರಾಗದಿಂದವೆ ಬಂದು ಹೊಕ್ಕನು
ಕೂಗಿದವರಾರೆನುತ ಬರುತಿರೆ ಕಂಡನುರಗಪತಿ
ಪೋಗುತಿದೆಯೆನ್ನಸುವು ಸಲಹು ಷ
ಡಾಗಮಜ್ಞ ನೃಪಾಲಯೆನಲಾ
ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ

೧೦

ಉರಗಪತಿ ಕಾರ್ಕೋಟಕನು ತಾ
ನರಸ ಕೇಳೀ ಬನದೊಳಿರುತಿರೆ
ಪರಮಋಷಿ ಬಂದೆನ್ನ ತಾಗಿದನಂದು ಭೀತಿಯಲಿ
ಕರೆದು ಕೊಟ್ಟನು ಶಾಪವನು ಸಂ
ಚರಿಸದಂತಿರೆಯೆನಗೆಯಿದು ಪರಿ
ಹರವದೆಂದಿಗೆ ಮುನಿಪ ಕರುಣಿಪುದೆಂದೊಡಿಂತೆಂದ

೧೧

ಇರಲಿರಲು ಕಾಲಾಂತರಕೆ ಭೂ
ವರನು ನಳನೃಪನಿಲ್ಲಿಗೈದುವ
ಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಿಕ
ಪರಿಹರಿಪುದೆನೆ ಮುನಿಯ ವಚನದಿ
ಬರವ ಹಾರುತ್ತಿರಲು ಬಂದೈ
ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ

೧೨

ಕರುಣದಲಿ ನೃಪ ಭೀತಿಗೊಳ್ಳದೆ
ಯುರಗಪತಿಯನು ತೆಗೆಯುತನಲನ
ಉರಿಯ ತಪ್ಪಿಸಿ ಕೊಳದ ತೀರಕೆ ತಂದುಪರಿಚರಿಸೆ
ಕರವಿಡಿದು ಧರಣಿಪನ ಕಚ್ಚಿದ
ಡುರವಣಿಸಿ ವಿಷವೇರೆ ನೃಪತಿಯ
ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ

೧೩

ದೊಡ್ಡ ಹೊಟ್ಟೆಯ ಗೂನುಬೆನ್ನಿನ
ಅಡ್ಡ ಮೋರೆಯ ಗಂಟುಮೂಗಿನ
ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ
ಜಡ್ಡು ದೇಹದ ಗುಜ್ಜುಗೊರಲಿನ
ಗಿಡ್ಡ ರೂಪಿನ ಹರುಕು ಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ

೧೪

ಮಾರನಾಕಾರದ ನೃಪಾಲಕ
ಕ್ರೂರರೂಪಾದನು ಪುರಾಕೃತ
ಮೀರಲಾರಳವೆಂದು ನುಡಿದನು ತನ್ನ ಮನದೊಳಗೆ
ತೋರಮಾಣಿಕವೆಂದು ಪಿಡಿದರೆ
ಭೂರಿ ಕೆಂಡವಿದಾಯ್ತು ಶಿವಶಿವ
ಕ್ರೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ

೧೫

ಮುನ್ನ ಮಾಡಿದ ಕರ್ಮಫಲವಿದು
ಬೆನ್ನ ಬಿಡದಿರಲುರಗಪತಿ ಕೇ
ಳಿನ್ನು ನೋಯಲದೇಕೆ ತಾನೇ ಪಾಪಿಯಾದೆನಲ
ಪನ್ನಗಾರಿಧ್ವಜನ ಕೃಪೆ ತನ
ಗಿನ್ನು ತಪ್ಪಿದ ಬಳಿಕ ಲೋಕದೊ
ಳಿನ್ನು ಸೈರಿಸಲಾರ ವಶವೆಂದೆನುತ ಮರುಗಿದನು

೧೬

ಏಕೆ ನೃಪತಿ ವೃಥಾ ಮನೋವ್ಯಥೆ
ಕಾಕಬಳಸಲು ಬೇಡ ನೀನವಿ
ವೇಕಿಯೇ ಸಾಕಿನ್ನು ನಿನಗುಪಕಾರವಂಜದಿರು
ಲೋಕ ನಿನ್ನನು ಕಾಣದಂತಿರ
ಬೇಕೆನುತಲೇರಿಸಿದೆ ಗರಳವ
ನೇಕವುಪಕಾರಂಗಳಹವದರಿಂದ ನಿನಗೆಂದ

೧೭

ಗರಳವಿದು ಸರ್ವಾಂಗದಲಿ ಸಂ
ಚರಿಸುತಿಹ ಪರಿಯಂತ ರಿಪುಗಳ
ಶರಜಲಾಗ್ನಿಭುಜಂಗರೋಗಾದಿಗಳ ಭಯವಿಲ್ಲ
ನಿರುತವಿದು ವಜ್ರಾಂಗಿ ಬೇಡಿ
ನ್ನರಸ ಚಿಂತಿಸಬೇಡ ಕಾರ್ಯದ
ಹೊರೆಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ

೧೮

ಜನಪ ಕೇಳೈ ಧರೆಗೆ ಋತುಪ
ರ್ಣನು ಮಹಾರಾಜೇಂದ್ರ ಗುಣನಿಧಿ
ಯಿನಕುಲಾಂಬುಧಿ ಚಂದ್ರನಾತನ ಪುರವಯೋಧ್ಯೆಯದು
ನಿನಗೆ ಬಹುದಕ್ಷಹೃದಯವು ಆ
ತನಲಿ ನೀನವಗಶ್ವ ಹೃದಯವ
ನನುಗೊಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ

೧೯

ಪೊಡವಿಪನನೋಲೈಸು ವಾಘೆಯ
ಪಿಡಿದು ಬಾಹುಕನೆಂಬ ನಾಮದಿ
ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು
ಬಿಡದೆ ಮುನ್ನಿನ ರೂಪು ಬೇಕಾ
ದಡೆ ನೆನೆವುದಾ ಪಕ್ಷಿಗಳ ಹ
ಚ್ಚಡವನೀವುವು ಧರಿಸಲಡಗುವುದೀ ಕುರೂಪಿತನ

೨೦

ನಿನ್ನ ಹವಣೇ ಪೂರ್ವಾದಲಿ ಭಿ
ಕ್ಷಾನ್ನವನು ಬೇಡಿದನು ಪಶುಪತಿ
ಪನ್ನಗಾರಿಧ್ವಜನು ಕಾಯ್ದನು ಪಶುಗಳಡವಿಯಲಿ
ಉನ್ನತೈಶ್ವರ್ಯಪ್ರದನು ಶತ
ಮನ್ಯು ಬನದಲಿ ನವೆಯನೇ ಸಾ
ಕಿನ್ನು ಮನನೋಯದಿರು ಚಿತ್ತೈಸೆಂದನುರಗಪತಿ

೨೧

ಪರಮಸತ್ಯವ್ರತದೊಳಾ ಪು
ಷ್ಕರನ ಗೆಲಿದುನ್ನತದ ರಾಜ್ಯದ
ಸಿರಿ ಮಿಗಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತ
ವರವನಿತ್ತೆನು ನಿನಗೆಯೆಂದುಪ
ಚರಿಸಿ ಕಾರ್ಕೋಟಕನು ನಳನೃಪ
ಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ

೨೨

ಬಲಿದ ಚಿಂತೆಯ ಮನದ ದುಗುಡದ
ನಳನೃಪತಿ ಕಾನನದಿ ಬರುತಿರೆ
ಮಲೆತು ತೊಲಗದ ದುಷ್ಟಮೃಗಗಳ ಕಂಡು ನಸುನಗುತ
ಹಲವು ಗಿರಿಗುಹೆ ಗಹ್ವರಂಗಳ
ಕಳೆದು ಮುಂದಣ ಜನಪದಂಗಳ
ಬಳಿವಿಡಿದು ನಡೆತಂದನಲಸದೆ ಹಲವು ಯೋಜನವ

೨೩

ಹರಿವ ನದಿಗಳ ವನತಟಾಕದ
ವರಕುಸುಮ ಮಲ್ಲಿಗೆಯ ಬನಗಳ
ಪುರದ ಪ್ರಾಂತದೊಳೆಸೆವ ಕೆಂದಾವರೆಯ ಕೊಳಗಳನು
ಉರುತರದ ಪಾನೀಯಶಾಲೆಯ
ಮರಗಳಿಂದತಿಮೆರೆವ ರಾಜ್ಯವ
ಧರಣಿಪತಿ ಸಂತಸದಿ ನೋಡುತ ಬಂದನಾಯೆಡೆಗೆ

೨೪

ಧಗಧಗಿಪ ಕೋಟಾವಳಿಯ ಹೊಗ
ರುಗುವ ಹೇಮದ ಕೊತ್ತಳಂಗಳ
ಗಗನವನು ಚುಂಬಿಸುವ ತೆನೆಗಳ ಸಾಲುರತ್ನಗಳ
ಸೊಗಸುವಾಳ್ವೇರಿಗಳ ಸುತ್ತಿರಿ
ವಗಳ ಘಾತವನಾರು ಬಲ್ಲರು
ಬಿಗಿದ ವಜ್ರಕವಾಟವೆಸೆದುದು ದಿಕ್ಕುದಿಕ್ಕಿನಲಿ

೨೫

ಹೊಳೆವ ಮಿಸುನಿಯ ರತ್ನನಿಚಯದ
ನೆಲೆನೆಲೆಯ ಸೌಧಾಗ್ರದಲಿ ಪ್ರ
ಜ್ವಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳ
ಲಲನೆಯರ ನಾನಾ ವಿನೋದದ
ಹಲವು ಗೋಪುರಶಿಖರದಗಣಿತ
ನೆಲೆಯ ವರ್ಣಿಸಲರಿದಯೋಧ್ಯಾಪುರವು ರಂಜಿಸಿತು

೨೬

ಅರಸುಗಳು ಭೂಸುರರು ಮಿಗೆ ವೈ
ಶ್ಯರು ಚತುರ್ಥರು ನಾಗರಿಕದ
ಪುರಜನರು ಸಂದಣಿಸಿತಗಣಿತ ರಾಜವೀಧಿಯಲಿ
ಕರಿ ತುರಗ ರಥ ಪಾಯದಳ ಗೋ
ಚರಿಸಿತಂಗಡಿ ನವವಿಧಾನದಿ
ಮೆರೆವಯೋಧ್ಯಾಪುರವ ಕಂಡನು ತೂಗಿದನು ಶಿರವ

೨೭

ಬಂದು ಹೊಕ್ಕನು ಪುರವ ಮೆರೆವತಿ
ಚಂದವನು ನೆರೆನೋಡಿ ಮನದೊಳ
ಗಂದು ಕೊಂಡಾಡಿದನು ಋತುಪರ್ಣನ ಮಹಾಸಿರಿಯ
ತಂದುದೇ ವಿಧಿ ತನ್ನನಿಲ್ಲಿಗೆ
ಮಂದಭಾಗ್ಯನು ತಾನೆನುತ ಮನ
ನೊಂದು ನೆನೆದನು ವರಪುರಾಧಿಪ ಚೆನ್ನಕೇಶವನ

೨೮