EN | KA

III

Naḷacaritre

ರಾಜಿಸುವ ವರಭೀಮಪುರದಲಿ
ರಾಜ ನಳನೃಪ ಮದುವೆಯಾಗಿ ಸ
ರಾಜತೇಜದಿ ಬಂದು ಹೊಕ್ಕನು ಪುರವ ಸತಿಸಹಿತ

ಕೇಳು ಧರ್ಮಜ ನಳನ ರೂಪನು
ಕೇಳಲೀ ಹದನಾಯ್ತು ಸತಿಗೆ ನೃ
ಪಾಲನಂಗವು ಗೋಚರಿಸಲೆಂತಹುದೊ ವಿರಹಾಗ್ನಿ
ನಾಲಗೆಗೆ ದ್ರವವಿಲ್ಲ ಮಂಚದ
ಮೇಲೆ ಮಲಗಳು ಬಲಿದವಸ್ಥೆಯ
ಹೇಳಲಿನ್ನೇನರಸ ದಮಯಂತಿಯ ಮನೋವ್ಯಥೆಯ

ಲಲನೆ ನಿದ್ರಾಂಗನೆಯನುಳಿದಳು
ಹೊಲಬುದಪ್ಪಿದ ಮನದಿ ಸತಿಯರು
ಸುಳಿಯೆ ನಳನೃಪ ಬಂದನಿದೆಯೆಂದೆನುತ ಕಳವಳಿಸಿ
ನಿಲುಕಿ ನೋಡುವಳೊಮ್ಮೆ ಕಾಣದೆ
ಹಲುಬುವಳು ಮತ್ತೊಮ್ಮೆ ಕಂಡದ
ಕೆಳದಿಯರು ತಮ್ಮೊಳಗೆ ತಾವಾಲೋಚಿಸಿದರಲ್ಲಿ

ವಿರಹ ಬಲಿದುದು ಸತಿಗೆ ನಾವಿದ
ನರಸಗರುಹುವೆವೆಂದು ಕೆಳದಿಯ
ರಿರದೆ ಬಂದರು ಭೀಮನೃಪಗಿಂತೆಂದರೀ ಹದನ
ವರಕವಿಗಳಂದಿನಲಿ ಧರಣೀ
ಶ್ವರನ ಕೈವಾರಿಸಲು ಕೇಳಿದು
ತರುಣಿ ವಿರಹಕೆ ತನುವ ತೆತ್ತಿಹಳೆಂದರಬಲೆಯರು

ಕೇಳಿದನು ನಸುನಗುತ ಭೀಮನೃ
ಪಾಲ ತನ್ನಾತ್ಮಜೆಯ ಯೌವನ
ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ
ಓಲಗಕೆ ನಡೆತಂದು ಬರೆಸಿದ
ನೋಲೆಗಳ ಕಳುಹಿಸಿದನು ಧರಣೀ
ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ

ಹರಿದರರಸಾಳುಗಳು ದಿಕ್ಕುಗ
ಳರಸುಗಳ ನಗರವನು ಇತ್ತಲು
ಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿ
ತರಿಸಿದರು ಭಂಡಾರದಲಿ ನವ
ಭರಿತವಾದ ಸುವಸ್ತುಗಳ ವಿ
ಸ್ತರಿಸಿ ಕಟ್ಟಿದರಗಲದಲಿ ವೈವಾಹಮಂಟಪವ

ಹೊಳೆವ ದಂತದ ಕಂಬಗಳ ಪು
ತ್ತಳಿಯ ಸಾಲಿನ ಮೇಲುಕಟ್ಟಿನ
ತಳಿರ ತೋರಣದೋರಣದ ಲೋವೆಗಳ ಅರಳೆಲೆಯ
ಬಿಳಿಯ ಮುತ್ತಿನ ಸರದ ಪವಳದ
ಬಿಳಿಯ ಚೌರಿಯ ಮೇಲುಗಟ್ಟಿನ
ಹೊಳಹು ಮಿಗೆ ರಚಿಸಿದರು ಸತಿಯ ವಿವಾಹಮಂಟಪವ

ಓರಣದ ಬೀದಿಗಳ ಸಾದಿನ
ಸಾರಣೆಯ ಕತ್ತುರಿಯ ಮಿಗೆ ಪ
ನ್ನೀರ ಚಳೆಯದ ಪರಿಮಳದ ಕುಂಕುಮದ ಕಾರಣೆಯ
ತೋರಣದ ತಳಿಗೆಗಳ ಘನಸಿಂ
ಗಾರವೆಸೆಯುವ ಕೇರಿಕೇರಿಯ
ವಾರನಾರಿಯರಿಂದ ಸಂದಣಿಸಿತು ವಿದರ್ಭಪುರ

ಮಾಳವಾಂಧ್ರ ಕಳಿಂಗ ಕೋಸಲ
ಚೋಳ ಮತ್ಸ್ಯ ವರಾಳ ಕೊಂಕಣ
ಗೌಳ ಕುಂತಳ ಮಗಧ ಬರ್ಬರ ಪಾಂಡ್ಯ ಕರ್ಣಾಟ
ಲಾಳ ವಂಗ ಸುರಾಷ್ಟ್ರ ಕುರು ನೇ
ಪಾಳ ಘೂರ್ಜರ ಸಿಂಧು ಮರು ಪಾ
ಚಾಳ ಮೊದಲಾದಖಿಳ ಧರಣೀಪಾಲರೈದಿದರು

ಧರಣಿವಲಯ ದಿಗಂತದವನೀ
ಶ್ವರರು ಭೂಸುರ ಸಿದ್ಧ ವಿದ್ಯಾ
ಧರರು ಸುಜನರು ಮಲ್ಲ ಸಚಿವರು ಮಕುಟವರ್ಧನರು
ಪರಮಋಷಿಗಳು ಪಂಡಿತರು ಕವಿ
ವರರು ನಟ ಗಾಯಕರು ವಿದ್ಯಾ
ಧರರು ದೈವಜ್ಞರುಗಳಗಣಿತರಾಗಿ ನೆರೆದುದು ರಾಯ ಕೇಳೆಂದ

ಆ ಸಮಯದಲಿ ನಾರದನು ಹರಿ
ವಾಸುದೇವಾಯೆಂಬ ವೀಣೆಯ
ಭಾಸುರದ ಕರಗಳಲಿ ನುಡಿಸುತ ಮುನಿಗಳೊಗ್ಗಿನಲಿ
ವಾಸವನ ಸಭೆಗೈತರಲು ಸಂ
ತೋಷದಿಂದಿದಿರೆದ್ದು ಘನಸಿಂ
ಹಾಸನದಿ ಕುಳ್ಳಿರಿಸಿ ಕೈಮುಗಿದೆಂದನಮರೇಂದ್ರ

೧೦

ಎತ್ತಣಿಂದೈತಂದಿರುರ್ವಿಯೊ
ಳುತ್ತಮರು ಧರಣೀಶರಲಿ ನೆರೆ
ಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನು
ಚಿತ್ತವಿಸಿ ಮುನಿನಾಥಯೆನಗದ
ಬಿತ್ತರಿಸಿ ಪೇಳೆನಲು ಸುರಮುನಿ
ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ

೧೧

ಅಮರಪತಿ ಕೇಳವನಿಯಲಿ ಭೂ
ರಮಣರುಂಟು ಅನೇಕವವರೊಳು
ನಿಮಗೆ ಪೇಳ್ವೆ ವಿದರ್ಭಪುರಪತಿ ಭೀಮನೃಪತನುಜೆ
ಕಮಲಮುಖಿ ದಮಯಂತಿಗೆವ್ವನ
ಸಮತಳಿಸೆ ಚಿತ್ತದಿ ಸ್ವಯಂವರ
ಕಮಿತಬಲ ನೃಪರೈದಿ ಬರುತಿರೆ ಧರಣಿಯಗಲದಲಿ

೧೨

ಅಲ್ಲಿ ನೆರೆದ ಸಮಸ್ತ ಧರಣೀ
ವಲ್ಲಭರನೇನೆಂಬೆ ಪಟ್ಟಣ
ವೆಲ್ಲ ನೆರೆದುದು ದೇಶದೇಶಾಂತರದ ಯಾಚಕರು
ನಿಲ್ಲದೈತರುತಿರೆ ವಿವಾಹವ
ನಲ್ಲಿ ನೋಡುವೆವೆನುತ ಮುನಿ ಕರ
ಪಲ್ಲವದ ವೀಣೆಯಲಿ ಹಂಸವನೇರಿ ಹೊರವಂಟು

೧೩

ಅರಸ ಕೇಳಮರೇಂದ್ರನಾ ಮುನಿ
ವರನ ವಚನವ ಕೇಳಿ ಹೆಚ್ಚಿದ
ವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನ
ಪರಮಸತಿ ದಮಯಂತಿಯಳನುಪ
ಚರಿಯದಲಿ ಯೆನಗೊಲಿಯೆ ಮಾಡೆಂ
ದುರುತರದ ವಸ್ತುಗಳನಿತ್ತಬಲೆಯರ ಬೀಳ್ಕೊಟ್ಟ

೧೪

ತರಿಸಿಯೇರಿದ ದಿವ್ಯರಥವನು
ಕರೆಸಿದನು ಯಮ ವರುಣ ವಾಯ
ವ್ಯರು ಸಹಿತ ಹೊರವಂಟನಮರಾವತಿಯನಮರೇಂದ್ರ
ಧರೆಗಿಳಿದು ಬರೆ ಮುಂದೆ ಮಾರ್ಗದಿ
ಸ್ಮರನ ರೂಪಿನ ನೈಷಧನ ಕಂ
ಡರು ಮನೋರಾಗದಲಿ ಕಾಣಿಸಿಕೊಂಡರುಚಿತದಲಿ

೧೫

ನಳಿನಮಿತ್ರನ ತೇಜದವೊಲಿಳೆ
ಗಿಳಿವ ಮಹಿಮರ ಕಂಡು ರಥದಿಂ
ದಿಳೆಗಿಳಿದು ಭಕ್ತಿಯಲಿ ನಳ ಕೈ ಮುಗಿದು ನಿಂದಿರಲು
ತಳಿತ ಹರುಷಾನಂದದಲಿ ಬರ
ಸೆಳೆದು ಬಿಗಿಯಪ್ಪಿದರು ರಾಯನ
ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು

೧೬

ಕುಶಲವೇ ನಳನೃಪತಿ ಬಾರೈ
ಶಶಿಕುಲೋದ್ಭವ ನಿನ್ನ ಪಿತನೀ
ವಸುಧೆಗಧಿಪತಿ ವೀರಸೇನನು ಪರಮಸಖನೆಮಗೆ
ಒಸೆದು ಬೇಡುವ ಕಾರ್ಯವಿದು ಭರ
ವಸದಿ ಬಂದೆವು ನಮಗೆ ಫಲ ಸಿ
ದ್ಧಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ

೧೭

ಕರಿಗಮನ ಚಿತ್ತವಿಸು ನಾವೇ
ನರರು ನಿಮಗಂತರವೆ ಸಾಕಂ
ತಿರಲಿ ನಿಮ್ಮ ಪದಾಬ್ಜದರುಶನವಾದುದಿಂದಿನಲಿ
ಹರುಷ ಮಿಗೆ ನಮಗೇನು ಬುದ್ಧಿಯ
ಕರುಣಿಸುವಿರದ ಮಾಳ್ಪೆನೆನೆ ಶಚಿ
ಯರಸನಾ ನುಡಿಗೇಳಿ ನಗುತಿಂತೆಂದನಾ ನೃಪಗೆ

೧೮

ಭೂತಳದೊಳಿಹ ಸತಿಯರಲಿ ರೂ
ಪಾತಿಶಯೆ ದಮಯಂತಿಯೆನಲಾ
ಮಾತಿನಲಿ ಮನವೊಲಿದುದೆನಗವಳಲ್ಲಿ ನೀಪೋಗಿ
ಆ ತಳೋದರಿಗುಚಿತವಚನ
ಪ್ರೀತಿಪೂರ್ವಕದಿಂದ ಸತಿಯಳ
ನೀ ತಿಳುಹಿಯನುಕೂಲೆಯನು ಮಾಡೆಂದನಮರೇಂದ್ರ

೧೯

ಈತ ಪಿತೃಪತಿಯಮರಪತಿ ತಾ
ನೀತ ವರುಣನು ವಾಯುವೀತನು
ಮಾತ ಮನ್ನಿಸು ಮಾಡು ನಮಗುಪಕಾರವನು ನೀನು
ಈ ತತುಕ್ಷಣದೃಶ್ಯವರವನು
ಪ್ರೀತಿಯಿಂದೊಲಿದಿತ್ತೆವಿಂದಿನೊ
ಳಾ ತಳೋದರಿಯೊಲಿವ ಹದನನು ಮಾಡು ಹೋಗೆಂದ

೨೦

ಕೇಳಿದಾ ಮಾತಿನಲಿ ಚಿಂತೆಯ
ತಾಳಿದನು ಚಿತ್ತದಲಿ ನಳನೃಪ
ಲೋಲಲೋಚನೆ ತನ್ನನೇ ಪತಿಯೆಂದು ಭಜಿಸಿಹಳು
ಆ ಲತಾಂಗಿಯ ಮೇಲೆ ಪರಮವಿ
ಶಾಲಮನವಿಹುದಿನ್ನು ಶಿವಶಿವ
ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ

೨೧

ಎಂದು ಮನದಲಿ ಮರುಗಿ ವಿನಯದೊ
ಳೆಂದನೆಲೆಯಮರೇಂದ್ರ ನಿಮಗಾ
ಮಂದಗಮನೆಯನೊಳಗುಮಾಡೆಂದೆನಗೆ ಪೇಳ್ವಿರಲ
ಹಿಂದುಗಳೆದರೆ ಮನಕೆ ಖತಿ ನಿಮ
ಗಿಂದು ಬಾರದೆ ಬಿಡದು ಲೋಕದಿ
ಯಿಂದುಮುಖಿಯರ ಗುಣವ ತಿಳಿಯಲಸಾಧ್ಯ ಕೇಳೆಂದ

೨೨

ಆ ಯುವತಿಯರು ಕಾರ್ಯಗಳ ನೆರೆ
ಬೀಯ ಮಾಳ್ಪರು ಕುಟಿಲವಿದ್ಯದಿ
ಮಾಯೆಗಳ ಹಣ್ಣುವರು ನಿತ್ಯದಿ ಹುಸಿಯನಾಡುವರು
ಕಾಯವಳಿದರು ಅತರಗಜ
ಬಾಯಬಿಡರನ್ಯಾಯಮಾಡುವ
ರಾಯತಾಕ್ಷಿಯರಂಗವಿದು ಸುರರಾಜ ಕೇಳೆಂದ

೨೩

ಕಪಟವನು ಬಿಡರಾತ್ಮಬುದ್ಧಿಯೊ
ಳುಪಮೆಗಾಣದೆ ನುಡಿದು ಹೊಳೆವರು
ಚಪಲಚಿತ್ತದಿ ಮನವ ವಂಚಿಸಿ ಮಾತನಾಡುವರು
ಗುಪಿತವಳವಡದಾಪ್ತರೊಡವೆಯ
ನಪಹರಿಸಿ ಸಾಹಸವ ಮೆರೆವರು
ನಿಪುಣೆಯರಿಗಿದು ಸಹಜಗುಣವಮರೇಂದ್ರ ಕೇಳೆಂದ

೨೪

ಸಾವಿಗೆಣಿಸರು ಮನದಿ ಸತ್ಯವ
ಭಾವಿಸರು ಹುಸಿಯೊಲುಮೆದೋರುವ
ರಾವಪರಿಯಲಿ ಹೃದಯಗೊಡದನೃತಗಳನಾಡುವರು
ವಾವೆವರ್ತನವಿಲ್ಲ ಸತ್ಯಕೆ
ಪಾವಕನ ಮುಟ್ಟುವರು ಸತಿಯರ
ನಾವ ಪರಿಯಲಿ ನಂಬಬಹುದೈಯೆನುತ ಹೊರವಂಟ

೨೫

ನಲವು ಹಿಂಗಿದ ಮನದಿ ನೃಪ ಮಾ
ರ್ಬಲವನಲ್ಲಿಯೆ ನಿಲಿಸಿ ಬರುತಿರೆ
ತಳಿತ ರತ್ನಪ್ರಭೆಯ ಸಾಲಿನ ಸೌಧಪಂಕ್ತಿಗಳ
ಹೊಳೆವ ಕಲಶದ ಗೋಪುರದ ಕೊ
ತ್ತಳದ ಸಾಲಿನ ಕೋಂಟೆಯನು ಕಂ
ಡಲಘುಭುಜಬಲನೃಪತಿ ಹೊಕ್ಕ ವಿದರ್ಭಪಟ್ಟಣವ

೨೬

ಅರಮನೆಯ ಬಾಗಿಲಿಗೆ ಬರಲಿ
ತ್ತೆರದ ವೇದಿಕೆಗಳಲಿ ಪಟುಭಟ
ರುರುತರದ ಕೈದುಗಳ ಕಾಹಿನ ದಾರವಟ್ಟದಲಿ
ಇರಲು ಕಂಡಾ ತರುಣಿಯರು ಸಂ
ಚರಿಸುತಿಹ ಸಡಗರವ ನಳಭೂ
ವರನದೃಶ್ಯದ ರೂಪಿನಲಿಯೊಳಹೊಕ್ಕನರಮನೆಯ

೨೭

ಆಗಲಾ ದಮಯಂತಿ ಚಿತ್ರದ
ಬಾಗಿಲುಪ್ಪರಿಗೆಯಲಿ ರತ್ನದ
ತೂಗುಮಂಚದ ಹಾಸಿನಲಿ ಕುಳ್ಳಿರಲು ಕೆಳದಿಯರು
ಆ ಗರುವೆಯೋಲಗದೊಳಿರುತಿರೆ
ಪೂಗಣೆಯನೆಸುಗೆಯಲಿ ನಳಚರಿ
ತಾಗಮದ ಕಥನಗಳ ತಾನಾಲಿಸುತ ಚಿತ್ತದಲಿ

೨೮

ಬಂದರಲ್ಲಿಗೆ ಸುರಪ ಕಳುಹಿದ
ಮಂದಗಮನೆಯರಖಿಳವಸ್ತುವ
ತಂದು ಕಾಣಿಕೆಗೊಟ್ಟು ಕೈ ಮುಗಿದೆರಗಿ ನಿಂದಿರಲು
ಬದ ಸತಿಯರ ನೋಡಿ ನೀವೆ
ಲ್ಲಿಂದ ಬಂದಿರಿ ನಿಮ್ಮ ಹದನೇ
ನೆಂದು ಬೆಸಗೊಳೆ ವಿನಯದಿಂದರುಹಿದರು ಮಾನಿನಿಗೆ

೨೯

ತಾಯೆ ಕೇಳಮರೇಂದ್ರ ನಿಮ್ಮ ನಿ
ಜಾಯತದ ಚೆಲುವಿಕೆಯ ಕೇಳಿದು
ಕಾಯಜನ ಶರಹತಿಗೆ ನೊಂದುರೆ ಕಳುಹಿದನು ನಮಗೆ
ಆಯತದ ಭೂಷಣವ ತೊಡು ಸುರ
ರಾಯನಿಗೆ ಸತಿಯಾಗು ಮರ್ತ್ಯದ
ರಾಯರಸ್ಥಿರರವರ ನೆಚ್ಚದಿರೆಂದರಾ ಸತಿಗೆ

೩೦

ಪದವಿ ಯಾವುದು ಲೋಕದಲಿ ಸುರ
ಪದವಿಯಲ್ಲದೆ ಬೇರೆ ಮಿಕ್ಕಿನ
ಪದವಿಯುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿ
ಸದರವೇ ನರಜನ್ಮದವರಿಗೆ
ಯೊದಗಲರಿಯದು ಪುಣ್ಯ ನಿನಗಿದು
ಸುದತಿ ಕರುಣಿಸು ಮಾತನೆಂದರು ನಗುತ ರಂಭೆಯರು

೩೧

ಅಲರ ಪರಿಮಳದೆಡೆಗೆ ತುಂಬಿಗ
ಳೊಲಿದು ಪೋಪಂದದಲಿ ಲೋಕದೊ
ಳಲರು ವಿಕಸಿತವಾಗಿ ಹೋಹುದೆ ತುಂಬಿಯಿದ್ದೆಡೆಗೆ
ಸಲೆ ತವಕದಿಂದಮರಪತಿಯೆಡೆ
ಗೊಲಿದು ನೀ ಪೋಪಂತೆ ಸುರಪತಿ
ನಲವಿನಿಂದಲಿ ನಿನ್ನ ಬಳಿಗೈದುವನು ಪುಣ್ಯವಲಾ

೩೨

ಎನಲು ಕೇಳಿದಳಾ ನುಡಿಯ ಸುರ
ವನಿತೆಗೆಂದಳು ಚಿತ್ತವೆನಗೊ
ಬ್ಬನಲಿ ಸಿಲುಕಿತು ಮರಳಿಪಡೆ ಕಮಲಾಕ್ಷಗಳವಲ್ಲ
ಅನಿಮಿಷಾಧಿಪ ತನಗೆ ದೇವಾಂ
ಗನೆಯರಿರುತಿರೆ ಮನಜಸತಿ ಪಾ
ವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ

೩೩

ಮರಳಿದರು ಸುರಸತಿಯರಿತ್ತಲು
ಬರುತೆ ನಳನೃಪತಿಲಕ ತಾ ಮನ
ಹರುಷದಲಿ ನಿಜರೂಪ ತಾಳ್ದನು ರಾಜತೇಜದಲಿ
ಅರಸನಿರೆ ದಮಯಂತಿ ಕಂಡ
ಚ್ಚರಿಯ ಮದನನೊ ನಳನೊ ನಳಕೂ
ಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ

೩೪

ಎಂದು ಪರಿತೋಷದಲಿ ನಾರೀ
ವೃಂದಸಹಿತಿದಿರೆದ್ದು ವಿನಯದಿ
ನಿಂದು ಕರಗಳ ಮುಗಿದು ಸಿಂಹಾಸನದಿ ಕುಳ್ಳಿರಿಸಿ
ತಂದು ಮುಕ್ತಾಫಲಗಳನು ಮುದ
ದಿಂದ ಕಾಣಿಕೆಯಿತ್ತು ಸತಿಯರ
ಸಂದಣಿಯ ಕೆಲಕೊತ್ತಿ ನುಡಿದಳು ಮಧುರವಚನದಲಿ

೩೫

ಆರು ನೀವೆಲ್ಲಿಂದ ಬಂದಿರಿ
ಕಾರಣವಿದೇನೆಮ್ಮ ರಾಜ
ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ
ಸೇರಲಮ್ಮದು ನೀವಘಾಡದ
ವೀರರತಿಸೌಂದರ್ಯರೆನೆ ನಳ
ಭೂರಮಣ ನಸುನಗುತ ನುಡಿದನು ಸತಿಗೆ ವಿನಯದಲಿ

೩೬

ತರುಣಿ ಕೇಳಮರೇಂದ್ರನಟ್ಟಿದ
ಚರನು ತಾ ಮಿಗೆ ನಿನ್ನ ರೂಪನು
ಸುರಮುನಿಪನರುಹಿದರೆ ಕೇಳಿದನಿಂದ್ರ ವಿರಹದಲಿ
ಕರಗಿ ಮದನನ ಶರಹತಿಗೆ ಮನ
ಮರುಗಿ ಬಂದಿಹನಿಲ್ಲಿಗಾತಂ
ಗರಸಿಯಾಗೆನೆ ಕೇಳಿ ಮುಖದಿರುಹಿದಳು ದಮಯಂತಿ

೩೭

ಬಲ್ಲವರು ನೀವಧಿಕರೆಮ್ಮೊಳು
ಸಲ್ಲದೀ ನುಡಿಯೇತಕಿದು ಶಚಿ
ವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನು
ವಲ್ಲಭನು ನಳನೃಪತಿಯಲ್ಲದೆ
ನಲ್ಲರುಂಟೇ ಜಗದಿ ನೀವ್ ಸುರ
ರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ

೩೮

ದೂತರಲಿ ಕುಲಗೋತ್ರಗಳ ನೀ
ನೇತಕರಸುವೆ ತರುಣಿಯಿಂದ್ರನು
ಖ್ಯಾತಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನು
ಭೂತಳದ ನರರಧಿಕರೇ ಸಂ
ಪ್ರೀತಿಯೇಕವರಲ್ಲಿ ಬಿಡು ಪುರು
ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ

೩೯

ಇಳೆಯ ಮರ್ತ್ಯರು ನಾಕನಿಳಯರಿ
ಗಳವೆಯಂತವರೆಲ್ಲ ನುಡಿಯಲು
ಕುಲಗಿರಿಗೆ ನೊರಜಂತರವೇ ನೀ ನೋಡು ಚಿತ್ತದಲಿ
ನಳನೃಪನ ಬಯಸುವಡೆ ನಿನಗವ
ನೊಲಿವನೇ ಧಾತ್ರೀಶರೊಳಗ
ಗ್ಗಳನೆ ಸಾಕೆಂದೆನಲು ಕನಲಿದು ನುಡಿದಳಾ ತರುಣಿ

೪೦

ಮಾನವಾಧೀಶ್ವರರೊಳಗೆ ಸನು
ಮಾನವುಳ್ಳವ ಸತ್ಯಸಂಧ ನಿ
ಧಾನಿ ಹಿಮಕರವಂಶಪಾವನ ಸಾರ್ವಭೌಮನೆಲೆ
ಆ ನರೇಂದ್ರಗೆ ಸರಿಯೆ ಮನುಮುನಿ
ದಾನವಾಮರರಿನ್ನು ನಿಮಗೀ
ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ

೪೧

ನಿಷಧಪತಿಯೇ ಪತಿಯೆನುತ ಭಾ
ವಿಸಿದೆನಾತನ ಕರುಣವೆನ್ನಲಿ
ಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆ
ಅಸುವ ತೆರುವೆನು ಎನಗೆ ಫಲ ಸಿ
ದ್ಧಿಸಲಿದೇ ಸಂಕಲ್ಪವೆಂದಾ
ಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ

೪೨

ಕರಗಿತಂತಃಕರಣ ನೃಪತಿಗೆ
ಸರಸಿಜಾಕ್ಷಿಯ ದೃಢವ ಕಂಡನು
ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ
ಸರಸಿಜಾನನೆ ಕೇಳು ತಾನೇ
ಧರಣಿಪತಿ ನಳನೆನಲು ಲಜ್ಜಿಸಿ
ಶಿರವ ನಸು ಬಾಗಿದಳು ಮತ್ತಿಂತೆಂದಳಾ ನೃಪಗೆ

೪೩

ನಾಕನಿಳಯರು ಕುಟಿಲವಿದ್ಯರ
ನೇಕಮಾಯಾವಿದರು ಧರೆಯೊಳು
ಪ್ರಾಕೃತರು ನಾವ್ ನಿಮ್ಮ ನಂಬುವ ಪರಿಯದೆಂತೆನಗೆ
ಸಾಕು ಮನ ನಂಬುವರೆ ಹೃದಯದ
ಜೋಕೆಯಲಿ ಕುರುಹೆನಗೆ ತೋರೆನ
ಲಾ ಕಮಲಲೋಚನೆಗೆ ನುಡಿದನು ನೃಪ ನಿದರ್ಶನವ

೪೪

ವನಜಮುಖಿ ನಿನ್ನಂತರಂಗದ
ಮನವ ಕಾಣುವ ಬಗೆಯೊಳಾನಿಂ
ದಿನಲಿಯನಿಮಿಷನೆಂದು ಪೇಳಿದೆಯಿದರ ತಪ್ಪೇನು
ಮನದ ಸಂಶಯವೇನು ಹಂಸೆಯ
ನಿನಗೆ ಕಳುಹಿದೆ ರಾಯಭಾರದಿ
ವನಿತೆ ನೀನಿದ ತಿಳಿದು ನಂಬುವುದೆನ್ನ ನೀನೆಂದ

೪೫

ನಳನೆನಲು ತನು ಪುಳಕಜಲದಲಿ
ಮುಳುಗಿ ಹೊಂಪುಳಿಯೋಗಿ ತನ್ನಯ
ಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿ
ತೊಲಗಿದಳು ನೃಪನಿತ್ತ ಪುರವನು
ಕಳೆದು ಬದನು ಮನದ ವಿರಹದಿ
ಬಳಲುತಿಹ ದೇವೇಂದ್ರನಿದ್ದೆಡೆಗಾಗಿ ವಹಿಲದಲಿ

೪೬

ಬಂದು ಭಯಭೀತಿಯಲಿ ನಳನೃಪ
ನಿಂದ್ರ ಮಾರುತ ಯಮ ವರುಣರಿಗೆ
ವಂದಿಸುತ ದಮಯಂತಿ ಪೇಳಿದ ಮಾತ ವಿವರಿಸಲು
ಒಂದು ನಿನ್ನಲಿ ಕುಟಿಲವಿಲ್ಲರ
ವಿಂದವದನೆಯರಿಂದ ಕೇಳಿದೆ
ವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ

೪೭

ನಳಿನಮುಖಿಯರ ಕಪಟಚಿತ್ತವ
ತಿಳಿಯಲಾರಿಗೆ ಸಾಧ್ಯ ಕೇಳೈ
ನಳನೃಪತಿ ನಮಗಾಗಿ ಬಳಲಿದೆಯೆನುತಲುಪಚರಿಸಿ
ಒಲಿದು ಭೂಷಣವಿತ್ತು ಕಳುಹಿದ
ರಿಳೆಯ ವಲ್ಲಭನಲ್ಲಿ ತಾವ್ ತ
ಮ್ಮೊಳಗೆಯಾಲೋಚಿಸಿದರಾಯಿಂದ್ರ ಯಮ ಮಾರುತರು

೪೮

ಲಲನೆಯೊಲಿವುದಕಿನ್ನು ಹದನಿದು
ಹಲವು ಮಾತೇನೆಂದು ನಾಲ್ವರು
ನಳನ ರೂಪನು ತಾಳ್ದರಿತ್ತಲು ಧರಣಿವಲ್ಲಭರು
ನಲಿದು ಬರುತಿರೆ ಸ್ವರ್ಗ ಮರ್ತ್ಯಾ
ವಳಿಯ ಸುಜನರು ಸಿದ್ಧ ಕಿನ್ನರ
ರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ

೪೯

ನೆರೆದುದಗಣಿತದರಸುಗಳು ಕರಿ
ತುರಗ ರಥ ಪಾಯ್ದಳದ ಸಂದಣಿ
ಮೆರೆವ ಶಂಖ ಮೃದಂಗ ತಂಟಬ ಭೇರಿ ನಿಸ್ಸಾಳ
ಉರುಬಿತಲ್ಲಿ ವಿದರ್ಭಪುರಪತಿ
ಧರಿಸಲಾಪನೆ ಹರಮಹಾದೇ
ವರಸ ಬಣ್ಣಿಸಲರಿಯೆ ನೆರೆದ ಮಹಾಮಹೀಸುರರ

೫೦

ಅವರವರ ಕರೆಕರೆದು ವಿನಯದೊ
ಳವರವರ ಮರಿಯಾದೆ ಮೇರೆಯೊ
ಳವರವರ ಸತ್ಕರಿಸಿ ಕುಳ್ಳಿರಿಸಿದನು ಭೀಮನೃಪ
ಅವರವರಿಗುಚಿತೋಪಚಾರದೊ
ಳವರವರ ಮನ್ನಿಸುತಲಿರ್ದನು
ಭುವನಪತಿಗಳನೇಕರನು ಸಭೆಯೊಳಗೆ ಕೇಳೆಂದ

೫೧

ಒಂದು ಕಡೆಯಲಿ ತಾಳ ಮದ್ದಳೆ
ಯೊಂದು ಕಡೆಯಲಿ ಸರಸನೃತ್ಯಗ
ಳೊಂದು ಕಡೆಯಲಿ ಸಾರತರ ಸಂಗೀತ ಸಾಹಿತ್ಯ
ಒಂದು ಕಡೆಯಲಿ ಗದ್ಯಪದ್ಯಗ
ಳೊಂದು ಕಡೆಯಲಿ ತರ್ಕಶಾಸ್ತ್ರಗ
ಳೊಂದು ಕಡೆಯಲಿ ಹಾಸ್ಯದಿಂದಿರುತಿರ್ದುದಾಸ್ಥಾನ

೫೨

ಇತ್ತಲಾ ದಮಯಂತಿಗೆಣ್ಣೆಯ
ನೊತ್ತಿದರು ಶೋಭಾನಗಳ ಪಾ
ಡುತ್ತ ಗೆಲಿದರು ತಿಗುರ ಮಿಗೆ ವಿವಿಧೋಪಚಾರದಲಿ
ಉತ್ತಮಾಂಗನೆಗಳವಡಿಸೆ ನಲಿ
ಯುತ್ತ ಸತಿಯರು ಮಜ್ಜನದ ಮನೆ
ಗತ್ಯಧಿಕ ಹರುಷದಲಿ ದಮಯಂತಿಯನು ಕರೆದೊಯ್ದು

೫೩

ಬೆರೆಸಿದರು ಪನ್ನೀರ ಹೊಂಗೊ
ಪ್ಪರಿಗೆಯಲಿ ಮೊಗೆಮೊಗೆದು ನಾರಿಯ
ರೆರೆದರಂಗನೆಗಮಳ ಚಂದನಗಂಧಪರಿಮಳದಿ
ತರುಣಿಯರು ಲೇಪಿಸಿದರರಸಿಗೆ
ವರದುಕೂಲಾಭರಣಗಳ ಶೃಂ
ಗರಿಸಿದರು ದಮಯಂತಿಯೊಪ್ಪಿದಳಧಿಕತೇಜದಲಿ

೫೪

ಮಡದಿಯರು ಬಳಸಿದರು ಸುತ್ತಲು
ಹಡಪ ಚಾಮರ ಗಿಂಡಿಯೂಳಿಗ
ದೊಡನಿರಲು ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ
ಎಡಬಲದೊಳಿಹ ಕಂಚುಕಿಗಳು
ಗ್ಗಡಿಸಿ ಪಾಯವಧಾರಿನಲಿ ಮುಂ
ಗುಡಿಯ ಸತಿಯರ ಗಡಣದಲಿ ನಡೆತದಳಿಂದುಮುಖಿ

೫೫

ಕುಡಿತೆಗಂಗಳ ಸಿರಿಮುಡಿಯ ಬಡ
ನಡುವ ಸೆಳೆವತಿಬೆಡಗಿನಲಿ ಹೊಂ
ಗೊಂಡದ ಮೊಲೆ ವೈಯಾರದುಡುಗೆಯ ಸಿರಿಯ ಸಡಗರದ
ತೊಡರ ಝಣಝಣರವದ ಮೆಲ್ಲಡಿ
ಯಿಡುವ ಗಮನದ ಭರದಿ ಕಿರುಬೆಮ
ರಿಡುತ ಬಂದಳು ಸಖಿಯರೊಡನೆ ವಿವಾಹಮಂಟಪಕೆ

೫೬

ಅವನಿಪತಿ ನಿಜಕುವರಿಗೆಂದನು
ವಿವಿಧರತುನದ ಮಕುಟವರ್ಧನ
ಭುವನಪತಿಗಳನೇಕವಿದೆಲಾ ಸಿಂಹಪೀಠದಲಿ
ಯುವತಿ ನೋಡಿತ್ತೆರದೊಳಿಹ ನೃಪ
ನಿವಹದಲಿ ನೀ ಹಾಯ್ಕು ಮನವಿ
ದ್ದವನ ಕೊರಳಿಗೆನುತ್ತ ಕೊಟ್ಟನು ಪುಷ್ಪಮಾಲಿಕೆಯ

೫೭

ಬಂದಳಾ ದಮಯಂತಿ ನೃಪಸಭೆ
ಗಂದು ಹೊಕ್ಕಳು ಕೆಳದಿಯರು ಮುದ
ದಿಂದ ತೋರಿದರಲ್ಲಿಯಿವರಿವರೆಂದು ವಿವರಿಸುತ
ಮುಂದೆ ಬರೆ ಕೈಕಂಬಿಯರು ಬಲು
ಸಂದಣಿಯ ಕೆಲಕೊತ್ತಿಸುತಲಿರ
ಲಿಂದುಮುಖಿ ನೋಡಿದಳು ಲಜ್ಜಾಭರದೊಳವನಿಪರ

೫೮

ಮಾಳವಾಧಿಪನೀತ ಮಗಧನೃ
ಪಾಲನೀತನು ಮತ್ಸ್ಯ ಕುರು ನೇ
ಪಾಲನೀತನು ಕೋಸಲಾನ್ವಯನೀತ ಬರ್ಬರನು
ಚೋಳನೀತನು ಸಿಂಧುರಾಜನು
ನೀಲನೀತ ಕಳಿಂಗ ಕುಂತಳ
ಪಾಲಕನ ನೋಡಿತ್ತಲಮರೇಶ್ವರನವೋಲಗವ

೫೯

ಎನ್ನನೊಲಿದಿಹಳೆಂದು ಕೆಲಬರು
ಸನ್ನೆ ಮಾಡಿದಳೆಂದು ಕೆಲಬರು
ಗನ್ನದಿಂದೀಕ್ಷಿಸುತಲಿದ್ದರು ಕೆಲವರು ಹುಬ್ಬಿನಲಿ
ಸನ್ನೆದೋರಿದಳೆಂದು ಕೆಲಬರು
ಬಿನ್ನಣದಿ ಮಿಗೆವೋರೆನೋಟದ
ಕಣ್ಣಿನಿಂದೀಕ್ಷಿಸಿದಳೆಂದಾಡಿದರು ಕೆಲಕೆಲರು

೬೦

ಬಾಯ್ ಬಿಂಕದ ಸವಿನುಡಿಯನಾ
ರಾಯರಾಡಿದರಲ್ಲಿ ಕಮಲದ
ಳಾಯತಾಂಬಕಿ ನಳನ ರೂಪಿನ ನಾಲ್ವರಿರೆ ಕಂಡು
ಮಾಯವಿದು ತಾನರಿಯೆನಿವರ ನಿ
ಜಾಯತವನೆಂದೆನುತ ಮುರಿದಾ
ವಾಯುಗತಿಯಲಿ ಬಂದು ಹೊಕ್ಕಳು ತನ್ನ ಮಂದಿರವ

೬೧

ಕಂಡುಪೇಕ್ಷಿಸಿ ಬಂದಳಂಗನೆ
ಮಂಡಲಾಧಿಪರೆಲ್ಲರನು ಅದ
ಕಂಡು ಭೀಮನೃಪಾಲ ತನುಜೆಯ ಬಳಿಗೆ ನಡೆತಂದು
ಅಂಡಲೆದು ಬೆಸಗೊಂಡೊಡಂದಾ
ಖಂಡಲನ ಮಾಯೆಗಳ ವಿವರಿಸೆ
ಚಂಡಬುದ್ಧಿಯನುಳ್ಳ ನೃಪ ಚಿಂತಿಸಿದ ಭಾರತಿಯ

೬೨

ವಾಣಿ ನೀರಜಪಾಣಿ ಬ್ರಹ್ಮನ
ರಾಣಿ ಪನ್ನಗವೇಣಿ ಸುಕೃತ
ಶ್ರೇಣಿ ಸುರನಿಕುರುಂಬವಂದಿತೆ ಸತ್ಯಸಂಚಾರಿ
ವಾಣಿ ಸ್ತ್ರೀಕುಲರನ್ನೆ ವರಗೀ
ರ್ವಾಣಿ ರಕ್ಷಿಸು ರಕ್ಷಿಸೆಂದಾ
ಕ್ಷೋಣಿಪತಿ ಕೈ ಮುಗಿದು ಬೇಡಿದನಾ ಸರಸ್ವತಿಯ

೬೩

ನೆನೆಯಲಾಕ್ಷಣ ಬಂದಳಲ್ಲಿಗೆ
ವನಜನಾಭನ ಸೊಸೆ ಜಗತ್ಪಾ
ವನೆ ಸುರಾರ್ಚಿತೆ ದೇವಿ ಭಕ್ತಾಶ್ರಿತಜನಾಧಾರೆ
ಜನಪ ನೀನಿಂದಿನಲಿಯೆನ್ನನು
ನೆನೆದ ಹದನೇನೆನಲು ಪದಯುಗ
ವನಜಕಾನತನಾಗಿ ಬಿನ್ನೈಸಿದನು ಭಾರತಿಗೆ

೬೪

ನಿಗಮನುತೆ ಗೀರ್ವಾಣಿ ರಕ್ಷಿಸು
ಮುಗುದರನು ಕರುಣದಲಿ ನೋಡುತ
ಲಗಣಿತದಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆ
ಮಗಳ ಮನ ವಿಗಡಿಸಿತು ನಾಲ್ವರು
ಬೆಗಡುಗೊಳಿಸಿದರೆನಲು ಭಾರತಿ
ನಗುತ ನುಡಿದಳು ಕರೆದು ದಮಯಂತಿಯಳನುಪಚರಿಸಿ

೬೫

ದೇವಮಾಯವಿದೀಗ ಕೇಳೆಲೆ
ದೇವಿ ಇಂದ್ರನ ಭಜಿಸೆನಲು ಸಂ
ಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿ
ದೇವಕುಲಸಂಭವರು ರಕ್ಷಿಸಿ
ನೀವು ಮಗಳೆಂದೆನ್ನ ಭಾವಿಸಿ
ಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ

೬೬

ಘಳಿಲನೇ ಪ್ರಚ್ಛನ್ನವೇಷವ
ಕಳೆದು ಯಮ ಪವಮಾನ ವರುಣರು
ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ
ನಳನೃಪನ ಕರೆಸಿದರು ಹೂವಿನ
ಮಳೆಯ ಕರೆದರು ದೇವದುಂದುಭಿ
ಮೊಳಗಲರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ

೬೭

ಆ ಸಮಯದಲಿ ಭೀಮನೃಪ ಸಂ
ತೋಷದಲಿ ಕರೆಸಿದನು ಮುನಿಗಳ
ಸೇಸೆದಳಿದರು ಸತಿಪತಿಯರಿಗೆ ಹರಸಿ ಅಕ್ಷತೆಯ
ಭೂಸುರರ ಮತದಿಂದಲಾ ಧರ
ಣೀಶ ಧಾರೆಯನೆರೆದನಲ್ಲಿ ವಿ
ಲಾಸದಿಂ ಪಾಡಿದರು ಮುತ್ತೈದೆಯರು ಶೋಭನವ

೬೮

ಮಂಗಳಾರತಿಯೆತ್ತಿದರು ದೇ
ವಾಂಗನೆಯರವನಿಪಗೆ ಧರೆಯೊಳು
ತುಂಗವಿಕ್ರಮನಾಗೆನುತ ಹರಸಿದರು ಮುನಿವರರು
ಹಿಂಗದಮರೇಂದ್ರನು ಮನೋಹರ
ದಂಗವಸ್ತ್ರಾಭರಣವಿತ್ತು ಸು
ರಾಂಗನೆಯರೊಡಗೂಡಿ ಕಳುಹಿಸಿಕೊಂಡನುಚಿತದಲಿ

೬೯

ಅರಸ ಕೇಳು ವಿವಾಹಸಮನಂ
ತರದೊಳೈದನೆಯ ದಿನದಲಿ ಕೊ
ಪ್ಪರಿಗೆಯಲಿ ತುಂಬಿದ್ದ ಪನ್ನೀರಿನಲಿ ಕುಂಕುಮವ
ಬೆರಸಿ ಹೊಯ್ದಾಡಿದರು ಉಭಯದ
ತರುಣಿಯರು ಓಕುಳಿಯ ಪರಿಮಳ
ಹೊರೆದುದವನೀತಳದ ಸುರನಿಕುರುಂಬ ನಲಿದಾಡೆ

೭೦

ಅರಸ ಕೇಳೈ ತನ್ನ ಬಾಂಧವ
ಧರಣಿಪರ ಮಂತ್ರಿಗಳ ಮುನಿಮು
ಖ್ಯರ ಸುಗಾಯಕ ಪಂಡಿತರ ಭೂಸುರರ ಯಾಚಕರ
ಹರುಷ ಮಿಗಿಲಾದರಿಸಿದನು ಕರಿ
ತುರಗ ವಸ್ತ್ರಾಭರಣದಿಂದುಪ
ಚರಿಸಿ ಭೀಮನೃಪಾಲನವರವರುಗಳ ಬೀಳ್ಕೊಟ್ಟ

೭೧

ಅಳಿಯನನು ಮನ್ನಿಸುತ ಮಗಳಿಗೆ
ಹೊಳೆವ ಮಣಿಭೂಷಣದ ಪೆಟ್ಟಿಗೆ
ಗಳನು ಗಜ ರಥ ತುರಗ ಪದಾತಿಗಳ ಲಲನೆಯರ
ಬಳುವಳಿಯನಿತ್ತವನಿಪತಿ ನಿಜ
ಬಲಸಹಿತ ಮಾಡಿದನು ಪಯಣವ
ನುಲಿವ ಮಂಗಳಪಾಠಕರ ಸಂದಣಿಯ ರಭಸದಲಿ

೭೨

ವರಮುಹೂರ್ತದೊಳೇರಿದನು ಮಣಿ
ಕಿರಣದುನ್ನತರಥವ ನಳಭೂ
ವರನು ನಿಜಸತಿಸಹಿತ ಹೊಕ್ಕನು ನಿಷಧಪಟ್ಟಣವ
ಮೊರೆವ ಶಂಖ ಮೃದಂಗ ಭೇರಿಗ
ಳುರುಬಿ ಧಂಧಣಿರೆನಲು ಮಿಗೆ ಮೋ
ಹರಿಸಲಾ ನಿಸ್ಸಾಳತತಿ ಘನವಾದ್ಯ ಘೋಷಿಸಲು

೭೩

ಬಂದು ಹೊಕ್ಕನು ಮಂದಿರವ ನೃಪ
ವೃಂದ ನಲಿಯಲು ಸಕಲಜನಸಹಿ
ತಂದು ಸಿಂಹಾಸನಕೆ ಬಂದನು ಸಚಿವರೊಗ್ಗಿನಲಿ
ಇಂದುಮುಖಿ ದಮಯಂತಿಯೊಡನಾ
ನಂದದಲಿ ಸಾಮ್ರಾಜ್ಯವಾಳಿದ
ನಂದು ವರಪುರದರಸ ಚೆನ್ನಿಗರಾಯ ಕರುಣದಲಿ

೭೪